ಸತಿ ಸುಲೋಚನ - ವರ್ಷ ೧೯೩೪ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಮೊದಲ ವಾಕ್ಚಿತ್ರ (ಮಾತುಗಳು ಇದ್ದ ಚಿತ್ರ). ಸೌತ್‌ ಇಂಡಿಯಾ ಮೂವಿಟೋನ್‌ ಸಂಸ್ಥೆಯ ಮೂಲಕ ಚಮನ್ ಲಾಲ್ ಡುಂಗಾಜಿ ಮತ್ತು ಭೂರ್‌ ಮಲ್‌ ಡುಂಗಾಜಿ ಈ ಚಿತ್ರವನ್ನು ನಿರ್ಮಿಸಿದರು. ಚಿತ್ರದ ನಿರ್ದೇಶನವನ್ನು ವೈ.ವಿ. ರಾವ್‌ ಮಾಡಿದ್ದರು. == ಕಥಾ ಸಾರಾಂಶ == ರಾಮಾಯಣದ ಒಂದು ಭಾಗವನ್ನು ಈ ಸಿನೆಮಾದಲ್ಲಿ ಅಳವಡಿಸಲಾಗಿದೆ. ರಾವಣನ ಸೊಸೆ ಸುಲೋಚನೆಗೆ ರಾಮ-ರಾವಣರ ಯುದ್ದ ನಿಲ್ಲಿಸಿ, ಸೀತೆಯನ್ನು ಕ್ಷೇಮವಾಗಿ,ಕಳುಹಿಸಬೇಕೆಂಬ ಹಂಬಲ. ಪತಿ ಇಂದ್ರಜಿತು ಈ ಮಾತನ್ನು ಪರಿಗಣಿಸದೇ ಶಕ್ತಿ ವಶೀಕರಣ ಯಾಗ ಮಾಡಿ ವಿಶೇಷ ಶಕ್ತಿ ಸಂಪಾದಿಸುತ್ತಾನೆ. ಆ ಶಕ್ತಿಯಿಂದ ಲಕ್ಷ್ಮಣನನ್ನು ಮೂರ್ಛೆ ಹೋಗುವಂತೆ ಮಾಡುತ್ತಾನೆ. ಹನುಮಂತ, ಸಂಜೀವಿನಿ ಮೂಲಿಕೆ ತಂದು ಲಕ್ಷ್ಮಣನನ್ನು ಎಚ್ಚರಿಸುತ್ತಾನೆ.ಇಂದ್ರಜಿತು ಮಾಯಾ ಸೀತೆಯನ್ನು ರೂಪಿಸಿ ಲಕ್ಷ್ಮಣನ ಎದುರು ತಂದು ಕೊಲ್ಲುತ್ತಾನೆ. ವಿಭೀಷಣನಿಂದ ನಿಜ ತಿಳಿದ ಲಕ್ಷ್ಮಣ ಇಂದ್ರಜಿತುವನ್ನು ಸಂಹರಿಸುತ್ತಾನೆ. ಸುಲೋಚನ ಪತಿಯೊಡನೆ ಅಗ್ನಿ ಪ್ರವೇಶ ಮಾಡಿ ಸತಿಯಾಗುತ್ತಾಳೆ. == ನಿರ್ಮಾಣ == ಈ ಚಿತ್ರವನ್ನು ಲಾಲ್‌ ಡುಂಗಾಜಿ ಮತ್ತು ಭೂರ್‌ ಮಲ್‌ ಡುಂಗಾಜಿ, ಸೌತ್‌ ಇಂಡಿಯಾ ಮೂವಿಟೋನ್‌ ಸಂಸ್ಥೆಯ ಮೂಲಕ ನಿರ್ಮಿಸಿದರು. ಸುಮಾರು ೪೦ ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಾದ ಚಿತ್ರ ಇದಾಗಿತ್ತು. ಬ್ರಿಟೀಷ್‌ ಫಿಲಂ ಸೆನ್ಸಾರ್‌ ಬೋರ್ಡ್‌ ಸೆನ್ಸಾರ್‌ ಮಾಡಿದ ಬಳಿಕ, ೧೭೩ ನಿಮಿಷಗಳ ಅವಧಿ ಹೊಂದಿದ್ದ ಈ ಚಲನಚಿತ್ರ ೧೫,೫೦೦ ಅಡಿಗಳಷ್ಟು ಇತ್ತು. == ಪಾತ್ರ ವರ್ಗ == ಎಂ.ವಿ. ಸುಬ್ಬಯ್ಯ ನಾಯ್ಡು, ಇಂದ್ರಜಿತುವಾಗಿ, ತ್ರಿಪುರಾಂಬ ಸುಲೋಚನೆಯಾಗಿ ಹಾಗೂ ಆರ್.ನಾಗೇಂದ್ರರಾವ್ ರಾವಣನ ಪಾತ್ರ ನಿರ್ವಹಿಸಿದ್ದರು. ಲಕ್ಷ್ಮಣನ ಪಾತ್ರದಲ್ಲಿ ವೈ.ವಿ ರಾವ್‌, ರಾಮನ ಪಾತ್ರದಲ್ಲಿ ಡಿ.ವಿ.ಮೂರ್ತಿ ರಾವ್‌ ನಟಿಸಿದ್ದರು. == ಹಾಡುಗಳು == ಈ ಚಿತ್ರವು ಒಟ್ಟು ಹದಿನೈದು ಹಾಡುಗಳನ್ನು ಹೊಂದಿದ್ದು, ಆರ್‌.ನಾಗೇಂದ್ರ ರಾವ್‌ ಮತ್ತು ಎಚ್.ಆರ್. ಪದ್ಮನಾಭ ಶಾಸ್ತ್ರಿಯವರು ಸಂಗೀತ ಸಂಯೋಜಿಸಿದ್ದರು. ಅಂದಿನ ಕಾಲದ ತಂತ್ರಜ್ಞಾನದಲ್ಲಿ ಹಿನ್ನಲೆ ಗಾಯನಕ್ಕೆ ಅವಕಾಶ ಇರದ ಕಾರಣ ನಟ-ನಟಿಯರೇ ಹಾಡುಗಳನ್ನು ಹಾಡುತ್ತಿದ್ದರು. == ಬಿಡುಗಡೆ == ಈ ಚಲನಚಿತ್ರವು ೧೯೩೪ರ ಮಾರ್ಚ್ ೩ರಂದು ಮೊದಲು ಬಿಡುಗಡೆಯಾಯಿತು. ೧೯೦೫ ರಲ್ಲಿ ಆರಂಭವಾದ ಬೆಂಗಳೂರಿನ ಮೊದಲ ಚಿತ್ರಮಂದಿರ ದೊಡ್ಡಣ್ಣಹಾಲ್ (ಪ್ಯಾರಾಮೌಂಟ್) ಚಿತ್ರಮಂದಿರದಲ್ಲಿ ಆರು ವಾರಗಳ ಕಾಲ ಪ್ರದರ್ಶನ ಕಂಡಿತು. ಆ ಸಮಯದ ನಿಯಮದಂತೆ, ಬ್ರಿಟೀಷ್‌ ಫಿಲಂ ಸೆನ್ಸಾರ್‌ ಬೋರ್ಡ್‌ ವತಿಯಿಂದ ಸೆನ್ಸಾರ್‌ ಆದರೂ, ಆಯಾ ಜಿಲ್ಲೆಗಳಲ್ಲಿ ಪ್ರದರ್ಶನಕ್ಕೆ ಮೊದಲು ಸೆನ್ಸಾರ್‌ ಅನುಮತಿ ಪಡೆಯಬೇಕಾಗಿದ್ದು. ಆದ್ದರಿಂತ ಸೂಕ್ತ ಅನುಮತಿ ಪಡೆದ ಬಳಿಕ ವಿವಿಧ ಜಿಲ್ಲಾ ಕೇಂದ್ರಗಳಲ್ಲೂ ಈ ಚಿತ್ರವನ್ನು ಪ್ರದರ್ಶಿಸಲಾಯಿತು. == ಉಲ್ಲೇಖ ==